ದೊಡ್ಡ ಹುದ್ದೆಯಲ್ಲಿದ್ದರೂ ಸರಳತೆಯಲ್ಲೇ ಬದುಕುತ್ತಿರುವವರು ಸುಧಾಮೂರ್ತಿ. ಸಾಕಷ್ಟು ಪುಸ್ತಕಗಳನ್ನು ಬರೆದಿರುವ ಅವರು ಜೀವನದ ಮೌಲ್ಯಗಳನ್ನು ಸರಳವಾಗಿ ಹೀಗೆ ಹೇಳುತ್ತಾರೆ.ಇವುಗಳನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ.
ಯಶಸ್ಸಿನ ಮೂಲ ಶಿಕ್ಷಣವೇ ಆಗಿದೆ. ಬಡತನ ತೊಲಗಿ ಹೊಸ ಜೀವನ ನಿಮ್ಮದಾಗಬೇಕಿದ್ದರೆ ಉತ್ತಮ ಶಿಕ್ಷಣ ಪಡೆಯಬೇಕು. ಇದು ಮಾತ್ರ ಎಲ್ಲರನ್ನೂ ಯಶಸ್ಸಿನ ದಡದತ್ತ ಕರೆದೊಯ್ಯುತ್ತದೆ ಎನ್ನುತ್ತಾರವರು.
ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಆ ಗುಣ ಪ್ರತಿಯೊಬ್ಬರಲ್ಲೂ ಇರಬೇಕು. ಧನಾತ್ಮಕ ಬದಲಾವಣೆ ತರಲು ಪ್ರತಿಯೊಬ್ಬರೂ ಪಾಸಿಟಿವ್ ಆಗಿ ಯೋಚಿಸುವುದನ್ನು ಕಲಿಯಬೇಕು. ಕರುಣೆ ಮತ್ತು ಸಹಾನುಭೂತಿ ಇದನ್ನು ಸಾಧ್ಯವಾಗಿಸುತ್ತದೆ.
ಜೀವನದಲ್ಲಿ ನಾವು ಎಷ್ಟು ನಮ್ರತೆಯನ್ನು ರೂಢಿಸಿಕೊಳ್ಳುತ್ತೇವೆಯೋ ಅಷ್ಟು ದೂರ ಸಾಧನೆಯ ಹಾದಿಯಲ್ಲಿ ಸಾಗುತ್ತೇವೆ. ಪ್ರಕೃತಿಯೊಂದಿಗೆ ನಂಟು ಬೆಳೆಸಿಕೊಂಡಾಗ ಬದುಕು ಸುಂದರವಾಗುತ್ತದೆ. ಅವಿರತ ಯತ್ನ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ ಎನ್ನುತ್ತಾರೆ ಸುಧಾಮೂರ್ತಿ.